ತೊರೆದು ಜೀವಿಸಬಹುದೇ

ತೊರೆದು ಜೀವಿಸಬಹುದೇ 





ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!......

ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!..........

ರಚನೆ : ಕನಕದಾಸರು

4 comments: