ರಚನೆ : ಸತೀಶ ತುಮಕೂರು
ಮರುಗುವುದು ಮನ ಮೆಚ್ಚುತ್ತಿಲ್ಲ ಜಗವೆನ್ನ ಎನಿಸಿ
ಗೈದ ಕಾರ್ಯಗಳಿಗೆ ಹೊಗಳಿಕೆಯನದು ಬಯಸಿ
ತೆಗಳಿಕೆಗಳನು ಸಹಿಸದೆ ಮನಸು ಕೊರಗುವುದು
ಮೆಚ್ಚಿಸಬೇಕಿದೆ ಜಗವನೆನುತಲಿ ಪರಿತಪಿಸುವುದು
ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು
ಜಗವನೆಲ್ಲ ಮೆಚ್ಚಿಸಲಾಗದೆಂಬುವುದನು ಅರಿತಿರು
ಮೆಚ್ಚುಗೆ,ತೆಗಳಿಕೆಗಳಿಗೆ ಸ್ಪಂದಿಸದಿರಲಿ ಮನಸು
ತೆಗಳಿಕೆಗಳಿಗಂಜದೆ ಸತ್ಕರ್ಮಗಳನೇ ಆಚರಿಸು
ಮೆಚ್ಚುಗೆ,ತೆಗಳಿಕೆಗಳೇನೆ ಬರಲಿ ಸನ್ಮಾರ್ಗದಿ ಮನಸನಿಡು
ಕೈ ಬಿಡದೆ ಸಲಹುವನು ಶ್ರೀ ನರಸಿಂಹ ಶಂಕೆಯನು ಬಿಡು
No comments:
Post a Comment